ಮತ್ತೊಮ್ಮೆ ಗುರುವಿಗೆ ನುಡಿ ನಮನ
ಇಂದು ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆ. ಇಡೀ ದೇಶವೇ ಗುರುಗಳನ್ನು ನೆನೆಯುವ ದಿನ. ಈ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಲೇಖನ.
"ಹುಟ್ಟಿನ ಹಿರಿಮೆಯಾಗಲಿ, ಸಂಪತ್ತಿನ ಸೊಬಗನ್ನಾಗಲಿ ನಾನು ನನ್ನ ಜೀವನದಲ್ಲಿ ಕಾಣಲಿಲ್ಲ. ನಾನು ನಾನಾಗಿ ಬೆಳೆದೆ ನಾನಾಗಿ ಬಾಳಿದೆ ದೇವರ ದಯೆಯಿಂದ ಜೀವನದಲ್ಲಿ ಬೆಳಕನ್ನು ಕಂಡೆ." ಇದು ಆದರ್ಶ ಶಿಕ್ಷಕ, ಮಹಾನ್ ಮಾನವತಾವಾದಿ, ವಿಶ್ವ-ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಾಧ್ಯಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ನುಡಿಮುತ್ತುಗಳು.
ಶಿಕ್ಷಕರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರಿಂದ ಮತ್ತು ಸಮಾಜಕ್ಕೆ ಶಿಕ್ಷಕರು ಮಾಡಿದ ಕೊಡುಗೆಗೆ ಗೌರವ ಸಂಕೇತವಾಗಿ ರಾಧಾಕೃಷ್ಣನ್ ರ ಜನ್ಮದಿನೋತ್ಸವವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ತಂದೆ-ತಾಯಿ ಮಕ್ಕಳಿಗೆ ಜನ್ಮಕೊಟ್ಟರೆ ಶಿಕ್ಷಕರು ಸುಶಿಕ್ಷಿತ ಜೀವನ ಕೊಡುತ್ತಾರೆ ಎನ್ನುವುದು ಎಷ್ಟೊಂದು ಅರ್ಥಗರ್ಭಿತವಾದ ಮಾತು.
ನನ್ನದು ಶಿಕ್ಷಕ ವೃತ್ತಿಯಾಗಿತ್ತು. ಮೂವತ್ತೇಳು ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಈಗ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ್ದೇನೆ. ಆದರೂ ಶಿಕ್ಷಕ ಪ್ರವೃತ್ತಿ ನನ್ನಿಂದ ಇನ್ನೂ ಮರೆಯಾಗಲಿಲ್ಲ.
ನನ್ನ ಸಹೋದ್ಯೋಗಿ ಸ್ನೇಹಿತೆ ಮಾಧುರಿ ಇನಾಮ್ಧಾರ ಯಾವಾಗಲೂ ಹೇಳುತ್ತಿದ್ದ ಮಾತೊಂದು ನೆನಪಾಯ್ತು.
"ಜೀವನ ನಿರ್ವಹಣೆಗೆ ನಾವು ಎಷ್ಟೋ ಉದ್ಯೋಗ ಮಾಡ್ತೇವೆ. ಬೇರೆ ಯಾವ ಉದ್ಯೋಗವಾದರೂ ಆ ವೃತಿಯಿಂದ ನಿವೃತ್ತಿ ಆದಾಗ ಅವರ ಉದ್ಯೋಗದ ಪರಿಮಿತಿ ಮುಗಿಯುತ್ತದೆ.
ಆದರೆ ಶಿಕ್ಷಕ ವೃತ್ತಿ ಹಾಗಲ್ಲ. ವೃತ್ತಿಯಿಂದ ನಿವೃತ್ತಿ ಹೊಂದಿದರೂ ಅವರು ಜೀವನ ಪರ್ಯಂತ ಶಿಕ್ಷಕರೇ ಆಗಿರ್ತಾರೆ. ಅವರ ಅಧ್ಯಯನ, ಅಧ್ಯಾಪನ ಜೀವನದುದ್ದಕ್ಕೂ ಇರುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪೂಜ್ಯ ಸ್ಥಾನ ಕೊಟ್ಟದ್ದು." ಎಂದು. ಇದು ಅಕ್ಷರ ಸಹ ಸತ್ಯವಾದ ಮಾತು.
ಆದರೆ ಶಿಕ್ಷಕ ವೃತ್ತಿ ಹಾಗಲ್ಲ. ವೃತ್ತಿಯಿಂದ ನಿವೃತ್ತಿ ಹೊಂದಿದರೂ ಅವರು ಜೀವನ ಪರ್ಯಂತ ಶಿಕ್ಷಕರೇ ಆಗಿರ್ತಾರೆ. ಅವರ ಅಧ್ಯಯನ, ಅಧ್ಯಾಪನ ಜೀವನದುದ್ದಕ್ಕೂ ಇರುತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ ಗುರುವಿಗೆ ಪೂಜ್ಯ ಸ್ಥಾನ ಕೊಟ್ಟದ್ದು." ಎಂದು. ಇದು ಅಕ್ಷರ ಸಹ ಸತ್ಯವಾದ ಮಾತು.
ನಾನು ನಿವೃತ್ತಿ ಹೊಂದಿ ಮೂರುವರ್ಷವಾದರೂ ಸೇವಾ ವೃತ್ತಿಯಲ್ಲಿ ಇದ್ದಂತೆ ಚಾಚು ತಪ್ಪದೆ ನನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಲೂ ನನಗೆ ವಿದ್ಯಾರ್ಥಿಗಳು, ಕೆಲವು ಪಾಲಕರು ಭಾಷಣ, ಚರ್ಚೆ,ನಿಬಂಧಗಳನ್ನು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಬರೆಸಿಕೊಳ್ಳಲು ನನ್ನ ಸಹಾಯ ಕೇಳುತ್ತಾರೆ.
ಹಾಯ್ ಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗೆ ಬೇಕಾದ ಭಾಷಣಗಳನ್ನು ಆಗಾಗ್ಗೆ ಸಿದ್ಧಪಡಿಸಿಕೊಡುವುದು ನನ್ನ ಕೆಲಸವಾಗಿಬಿಟ್ಟಿದೆ.
ಅದಲ್ಲದೆ ಆರ್. ಐ. ಇ. ದ. ಭಾರತ ದ ವಿದ್ಯಾರ್ಥಿನಿಯರು ಡಿಪ್ಲೋಮಾ ಇನ್ ಇಂಗ್ಲೀಷ್ ಕಮ್ಯುನಿಕೇಷನ್ ಅಸೈನ್ಮೆಂಟ್ ಗೆ ಕೊಟ್ಟಿರುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂದು ತಿಳಿಯದೆ ಇದ್ದಾಗ ನನ್ನ ಹತ್ತಿರ ಬರೆದು ಕೊಡಲು ಹೇಳ್ತಾರೆ. ಆಗೆಲ್ಲ ನಾನು ಬರೆದು ಕೊಡ್ತೇನೆ.
ಹೊಸ ವಿಷಯ ಇದ್ರೆ ನಾನು ಓದಿ ತಿಳಿದು ಅವರಿಗೆ ಸಹಾಯ ಮಾಡ್ತೇನೆ.ಇದು ನನ್ನನಿವೃತ್ತಿ ಜೀವನದ ಒಂದು ಭಾಗವಾಗಿದೆ. ಹೀಗಾಗಿ ಈಗಲೂ ನನ್ನ ಈ ಕಲಿಯುವ-ಕಲಿಸುವ ಪ್ರಕ್ರಿಯೆ ನಿರಂತರವಾಗಿ ಸಾಗಿದೆ.
ಕ್ಷಿಪಣಿ ಮಾನವ ಡಾ. ಅಬ್ದುಲ್ ಕಲಾಂ ರವರು ಉತ್ಸಾಹಿ ಶಿಕ್ಷಕರಾಗಿದ್ದರು. ಸದಾ ವಿಧ್ಯಾರ್ಥಿಗಳ ಸಮೂಹದಲ್ಲಿದ್ದು, ಅವರಿಗೆ ಸ್ಪೂರ್ತಿಯ ಸೆಲೆಯಾಗಿದ್ದರು. ವಿಧ್ಯಾರ್ಥಿ ಪ್ರಿಯರಾದ ಕಲಾಂರವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್,ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳೊಡನೆ ಸಂವಾದಿಸುತ್ತಿರುವಾಗಲೇ ಕುಸಿದು ಬಿದ್ದು ಕೊನೆಯುಸಿರೆಳೆದರು. ತಮ್ಮ ಕನಸನ್ನು ನನಸಾಗಿಸಿಕೊಂಡ ಅದೃಷ್ಟವಂತ ಶಿಕ್ಷಕರು. ಇಂತಹ ಮಹಾನ್ ಚೇತನಕ್ಕೆ ನನ್ನ ನಮನಗಳು.
ಸಿಧ್ಧತೆ,ಆದರ್ಶ, ಮಾನವೀಯತೆ, ಗಾಂಭೀರ್ಯ,ಹಾಸ್ಯ ಇಂತಹ ಗುಣಗಳನ್ನು ತಮ್ಮ ಬೋಧನೆಯಲ್ಲಿ ಅಳವಡಿಸಿಕೊಂಡು ಎಲ್ಲರಿಗೂ ಆದರ್ಶ ಗುರುಗಳಾಗಿ. ಗುರು ಶಿಷ್ಯರ ಸಂಬಂಧ ವೃದ್ಧಿಸಲಿ.ಸರ್ವರಿಗೂ ಶಿಕ್ಷಕ ದಿನಾಚರಣೆಯ ಶುಭಕಾಮನೆಗಳು.
Indu Naik
No comments :
Post a Comment