ಆಹಾ!ಮುಂಗಾರುಮಳೆ ಬಂದೇ ಬಿಟ್ಟಿತು!!
ವರ್ಷ ಪೂರ್ತಿ ಆಗಾಗ ಅಲ್ಲಲ್ಲಿ ಮಳೆ ಬೀಳ್ತಾ ಇದ್ರೂ ಅಧಿಕೃತವಾಗಿ ಮಳೆ ಆರಂಭವಾಗಿದ್ದು ಈ ಜೂನ್ ತಿಂಗಳಲ್ಲಿ. ಮಳೆ ಮಳೆ ಮಳೆ ತಂತು ಜೀವ ಕಳೆ.ಮುಂಗಾರಿನ ಸಂಭ್ರಮವನ್ನು ಸಡಗರದಿಂದ ಎದುರುಗೊಳ್ಳಲು ಜೀವರಾಶಿ ಕಾತರಿಸುತ್ತದೆ ಎನ್ನುವ ಅನುಭವವೇ ರೋಮಾಂಚಕ.ಅದರಲ್ಲೂ ಈ ಅನುಭವ ಗ್ರಾಮಾಂತರ ಪ್ರದೇಶದವರಲ್ಲಿ ಹೆಚ್ಹು.
ಮೇ ತಿಂಗಳಲ್ಲಿ ಕೊತ-ಕೊತ ಕುದಿಯುವ ಸುಡು-ಬಿಸಿಲಿಗೆ ಕಂಗೆಟ್ಟ ಧರೆಗೆ ತಂಪನೆಯ ಆಹ್ಲಾದತೆ ನೀಡುವ ಕಾಲ.ಬಿಸಿಲಿನ ಧಗೆಯಿಂದ ಯಾವಾಗ ಮಳೆ ಭೂಮಿ ಸ್ಪರ್ಶಿಸುತ್ತದೆಯೋ, ಯಾವಾಗ ಜಲವನ್ನೆಲ್ಲ ಹೀರಿಕೊಂಡೇನೋ ಎಂದು ಕಾದನೆಲ ಇದಿರು ನೋಡುವ ಕಾಲ.
ಭೂಮಿಗೆ ಬಿದ್ದ ಮೊದಲ ಮಳೆ ಹನಿ ಜೀವ-ರಾಶಿಗಳ ಚಟುವಟಿಕೆಗೆ ನಾಂದಿ.ಮಳೆಯ ತಂಪಿನಿಂದ ಹಸಿರು ಕಂಗೊಳಿಸುತ್ತದೆ.
ಸೊಗಸಾಗಿ ಬೆಳೆದ ಸಸ್ಯ-ಶಾಮಲೆ ನಸು ನಕ್ಕಾಗ ಜೀವ-ಜಾಲ ಸಡಗರದಿಂದ ಮೈಚಾಚುವುದು.
ಪ್ರಾಣಿಗಳ ಚಟುವಟಿಕೆ ಚುರುಕುಗೊಳ್ಳುವುದು, ಬೆಚ್ಚನೆಯ-ಗೂಡು ಕಟ್ಟಿಕೊಳ್ಳುವ ತವಕ ಹಕ್ಕಿಗಳದು. ಹೀಗೆ ಸಮಸ್ತ ಜೀವ-ಕೋಟಿಗಳಲ್ಲೂ ಹೊಸ ಚೈತನ್ಯ ಪುಟಿಯುವುದು.
ದ.ರಾ. ಬೇಂದ್ರೆಯವರ ಕವನದ ಸಾಲುಗಳು ಮಳೆಗಾಲದ ಆನಂದವನ್ನು ನೆನಪಿಸುತ್ತದೆ.
"ಬೆಟ್ಟ ತೊಟ್ಟಾವ ಕುತನಿಯ ಅಂಗಿ
ಹಸಿರು ನೋಡ ತಂಗಿ
ಹೊರಟಾವೆಲ್ಲೋ ಜಂಗಿ
ಜಾತ್ರೆಗೇನೋ ನೆರೆದದ ಇಲ್ಲೇ ತಾನು".
ಪ್ರತಿ ಮಳೆಗಾಲ ಬಂದಾಗಲೂ ನನಗೆ ನೆನಪಾಗುವುದು ನನ್ನ ಮಕ್ಕಳ ಬಾಲ್ಯ.ಮಗಳು ಪೂಜಾ,ಮಗ ಪುನೀತ ಚಿಕ್ಕವರಾಗಿದ್ದಾಗ, ಮಳೆಗಾಲದಲ್ಲಿ, ಮನೆಯಂಗಳದ ನೀರಿನಲ್ಲಿ ಕಾಗದದ ದೋಣಿ ಬಿಟ್ಟು ಯಾರ ದೋಣಿ ಬಹು ದೂರ ಹೋಗುತ್ತದೆ ಎಂದು ಪೈಪೋಟಿ ಮಾಡಿ ಸಂಭ್ರಮಿಸುತ್ತಿದ್ದುದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಆಗ ನಾನು ಅವರಿಗೆ ಅನೇಕ ಶಿಶುಗೀತೆ(ನರ್ಸರಿ ರೈಮ್)ಕಲಿಸಿದ್ದೆ. ಅವುಗಳಲ್ಲಿ ಒಂದು ಶಿಶುಗೀತೆ ನನ್ನ ಮಕ್ಕಳು ಯಾವಾಗಲೂ ಸಾಭಿನಯದೊಂದಿಗೆ ಹೇಳುತ್ತಿದ್ದರು.
ಮಳೆ ಮಾಮಾ ಬಂದ, ಮಳೆಹೂವ ತಂದ
ಗಾಳಿಮಾಮಾನ ಜೊತೆಗೆ
ತಂಪನ್ನೆಲ್ಲ ತಂದ
ಚಳಿಯಪ್ಪೋ ಚಳಿ, ಚಳಿಯಮ್ಮೋ ಚಳಿ
ಶಾಲ್ ಹೊದ್ಕೊಂಡೆ, ದುಪ್ಪಡಿ ಹೊದ್ಕೊಂಡೆ,
ಮಮ್ಮಿ ಸೀರೆ ಹೊದ್ಕೊಂಡೆ
ಚಳಿ ಹೋಗ್ಲೇ ಇಲ್ಲಾ
ಏನ್ಮಾಡ್ದೆ ಗೊತ್ತಾ, ಅಡುಗೆ ಮನೆಗೆ ಹೋದೆ
ಒಂದ್ ಲೋಟಾ ಬಿಸಿ-ಬಿಸಿ ಕಾಫಿ ಕುಡ್ದೆ
ಚಳಿ ಹೋಗ್ ಬಿಡ್ತು.
ಅದ್ರಲ್ಲೂ ನನ್ನ ಮಗ ಪುನೀತ ಸಾಭಿನಯ ಮಾಡುವಾಗ..."ಅಡುಗೆ ಮನೆಗೆ ಹೋದೆ, ಒಂದ್ ಲೋಟಾ ಬಿಸಿ-ಬಿಸಿ ಕಾಫಿ ಕುಡ್ದೆ" ಎನ್ನುವ ಸಾಲುಗಳನ್ನು ಹೇಳುವಾಗ, 'ನಿಲ್ಲು ಮಮ್ಮಿ ಒಂದ್ ನಿಮಿಷ, ಅಂತ ಅಷ್ಟಕ್ಕೇ ನಿಲ್ಲಿಸಿ, ಅಡುಗೆ ಮನೆಗೆ ಹೋಗಿ ಬಂದು ಮುಂದಿನದನ್ನು ಹಾಡ್ತಿದ್ದ.
ಇದನ್ನು ನಾನು ಮತ್ತು ನನ್ನಪತಿ ಎಷ್ಟೋ ಸಲ ನೆನೆಪಿಸಿ ಕೊಂಡು ಮನಃಪೂರ್ವಕವಾಗಿ ನಕ್ಕಿದ್ದುಂಟು. ಈಗ ವಿದೇಶದಲ್ಲಿರುವ ನನ್ನ ಮಕ್ಕಳಿಗೆ ಇದನ್ನು ನೆನಪಿಸಿದರೆ ಖುಷಿಪಡ್ತಾರೆ.
ಮನಸ್ಸಿಗೆ ಮುದ ನೀಡುವ, ಹೊಸ ಸಾಧನೆಗೆ ಸ್ಪೂರ್ತಿ ನೀಡುವ ಮಳೆಗಾಲವಿದು. ಕವಿ ಜಿ. ಎಸ್. ಶಿವರುದ್ರಪ್ಪರವರು ಈ ಬಗ್ಗೆ ಬರೆದ ಕವನದ ಸಾಲುಗಳು ಇಂತಿವೆ.
ಮುಂಗಾರಿನ ಅಭಿಷೇಕಕೆ
ಮಿದುವಾಯಿತು ನೆಲವು
ಧಗೆ ಆರಿದ ಹೃದಯದಲ್ಲಿ
ಪುಟಿದೆದ್ದಿತು ಚೆಲುವು
ಭರವಸೆಗಳ ಹೊಲಗಳಲ್ಲಿ
ನೇಗಿಲ ಗೆರೆ ಕವನ
ಶ್ರಾವಣದಲ್ಲಿ ತೆನೆದೂಗುವ
ಜೀವನೋತ್ಸವ ಗಾನ
ಋತುಮಾನಕ್ಕೆ ತಕ್ಕಂತೆ ಬದಲಾಗುವ ಬೆರಗು ಗಳನ್ನು ಕಣ್ತುಂಬ ನೋಡಿ ಮುಂಗಾರು ಮಳೆಯನ್ನು ಆನಂದಿಸಿ.
Indu Naik
I have great privilege and enjoyment to read your interesting blogs, sitting alone quietly in Germany this afternoon. Thank u for making me to recollect Monsoon rains at my place. Punit and Pooja r well remembered. ska
ReplyDelete