Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Friday, February 19, 2016

ಮಹಿಳೆಯರಿಗೆ ದೇವಸ್ಥಾನದಲ್ಲಿ ನಿಷೇಧ? ಎಷ್ಟು ಸರಿ?

ಮಹಿಳೆಯರು ಅಪವಿತ್ರರೆ?  ( ವಿಚಾರ ಮಂಥನ) 

                               ಅಂದಿನ ಪತ್ರಿಕೆಯಲ್ಲಿ ಮಹಿಳೆಯರ ಬಗ್ಗೆ ಓದಿ ಬೆರಗಾದೆ. ನಾನೂ ಒಬ್ಬ ಪ್ರಜ್ಞಾವಂತ ಮಹಿಳೆಯಾಗಿದ್ದು, ಮಹಿಳೆಯರ ಬಗ್ಗೆ ಇರುವ ತಾರತಮ್ಯ ನನ್ನ ಮನಸ್ಸು ಒಪ್ಪಿಕೊಳ್ಳಲಿಲ್ಲ. ನಾನೊಬ್ಬಳೇ ಏಕೆ ಸಾವಿರ ಸಾವಿರ ಮಹಿಳೆಯರೂ ಈ ಬೇಧವನ್ನು ಒಪ್ಪಿಕೊಳ್ಳಲಾರರು. ಆ ದಿನವಿಡಿ ನನ್ನ ಕೆಲಸದಲ್ಲಿ ನಿರತಳಾಗಿದ್ದರೂ ಮನಸ್ಸು ಈ ವಿಷಯದ ಕುರಿತು ಯೋಚಿಸುತ್ತಿತ್ತು.

 ಮಹಾರಾಷ್ಟ್ರದ ಶನಿ ಶಿಂಗಣಾಪುರದಲ್ಲಿ ಶನಿದೇವರ ಕೃಪೆಗೆ
 ಮಹಿಳೆಯರು ತವಕಪಡುತ್ತಿದ್ದುದು ವಿಶೇಷ. ಶನಿ ದೇವರನ್ನು ಹೆಂಗಸರು ಕಾಣಬಾರದೇಕೆ? ಇದೆಂತಹ ವಿಪರ್ಯಾಸ? 
 
ಶನಿ ದೇವರ ಶಿಲೆಯನ್ನು ಮುಟ್ಟಿ ಪೂಜಿಸುವ ಹಕ್ಕನ್ನು ಚಲಾಯಿಸುವ ಉದ್ದೇಶದಿಂದ ' ಭುಮಾತಾ ಬ್ರಿಗೇಡ್' ಅಧ್ಯಕ್ಷೆ ನೇತ್ರತ್ವದಲ್ಲಿ ಶಿಂಗನಾಪುರಕ್ಕೆ ಈ ಕಾರ್ಯಕರ್ತೆಯರನ್ನು ಬಂಧಿಸಿದರು ನಂತರ ಬಿಡುಗಡೆ ಮಾಡಿ ವಾಪಸ್ ಕಳುಹಿಸಿದರು.

 'ಗಣರಾಜ್ಯೋತ್ಸವ ದಿನ ಮಹಿಳೆಯರಿಗೆ ಕರಾಳ ದಿನ ಎಂದು ಘೋಷಿಸುತ್ತ ಮಹಿಳೆಯರು ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದರು ಎಂಬುದನ್ನು ಪತ್ರಿಕೆಯಲ್ಲಿ ಓದಿದಾಗ ಮನಸ್ಸಿಗೆ ಸಹಿಸಲಾರದಷ್ಟು  ವೇದನೆ ಆಯ್ತು.
 

'ಶನಿ ಶಿಂಗಣಾಪುರದ ಶಿಲಾರೂಪಿ ಶನಿದೇವರು. ಈ ಶಿಲೆಯನ್ನು ಮುಟ್ಟುವ ಹಕ್ಕು ಮಹಿಳೆಯರಿಗಿಲ್ಲ ಮಹಿಳೆ ಮುಟ್ಟು ಆಗುವದರಿಂದ. ಅವಳು ಮುಟ್ಟು ಆಗದ  ಸಂದರ್ಭದಲ್ಲೂ ಅಪವಿತ್ರಳೆ? ಮುಟ್ಟುಅಪವಿತ್ರವೇ? ಹಾಗಾದರೆ ಅದೇ ಮುಟ್ಟು ನಿಂತು ಹುಟ್ಟಿದವರೆಲ್ಲರೂ ಅಪವಿತ್ರರಲ್ಲವೇ?' ಎನ್ನುವ ಮಹಿಳೆಯರ ಅಳಲು ಪತ್ರಿಕೆಯಲ್ಲಿ ಓದಿದಾಗ ಮನಸ್ಸಿಗೆ ತುಂಬಾ ಹಿಂಸೆಯಾಯಿತು. 
 
ಇಂದು ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಪುರುಷರೊಂದಿಗೆ ಭುಜಕ್ಕೆ ಭುಜಕೊಟ್ಟು, ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಪ್ರಗತಿ ಪಥದತ್ತ ಹೆಜ್ಜೆ ಹಾಕುತ್ತಿದ್ದಾಳೆ. ಅಂದು ಕೇವಲ ಅಡುಗೆ ಮನೆಗೆ ಸೀಮಿತವಾದ ಹೆಣ್ಣು ಇಂದು ಅಂತರಿಕ್ಷದ ಮಟ್ಟದವರೆಗೂ ಸೈ ಎನಿಸಿಕೊಂದಿದ್ದಾಳೆ.
 
'ನಾನು ಹೆಣ್ಣು, ನಾನು ಭಾರತೀಯ ಸೈನ್ಯವನ್ನು ಸೇರುತ್ತೇನೆ, ನಾನು ನನ್ನ ದೇಶವನ್ನು ರಕ್ಷಿಸುತ್ತೇನೆ' ಎನ್ನುವ ದ್ರಢ ಸಂಕಲ್ಪದ ಹೆಣ್ಣು ಮಕ್ಕಳಿರುವಾಗ ತಾರತಮ್ಯ ಏಕೆ? ಹಿಂದೂ ಮಹಿಳೆಯರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧ ಏಕೆ? ಹಾಗಿದ್ದರೆ ಮಹಿಳೆಯರು ಅಪವಿತ್ರರೆ? ಅದು ಹೇಗೆ ಸಾಧ್ಯ?

ನಮ್ಮ ದೇಶದಲ್ಲಿ ಅನೇಕ ನದಿಗಳು ಹೆಣ್ಣುಗಳ ಹೆಸರನ್ನೇ ಹೇಳುತ್ತಿವೆ. ಗಂಗಾ,ತುಂಗಾ,ಕೃಷ್ಣೆ. ಕಾವೇರಿ,ನರ್ಮದಾ.ಗೋದಾವರಿ,ಶರಾವತಿ,ನೇತ್ರಾವತಿ ಹೀಗೆ ಅನೇಕ ನದಿಗಳು ಹೆಣ್ಣಿನ ಹೆಸರನ್ನೇ ಹೇಳುತ್ತಿದೆ.
 
 ಅದರಲ್ಲಿ ಒಂದು ಕಥೆ ಪ್ರಕಾರ ಭಗೀರಥನು ತನ್ನ ಪೂರ್ವಿಕರ ಮುಕ್ತಿಗಾಗಿ ತನ್ನ ರಾಜ್ಯವನ್ನು ಬಿಟ್ಟು ಹಿಮಾಲಯ ಸೇರಿ ತಪಸ್ಸು ಮಾಡಿ ಭಗೀರಥ ಪ್ರಯತ್ನದಿಂದ ಗಂಗೆಯನ್ನು ಭೂಮಿಗಿಳಿಸಿ ಸಗರನ ಅರವತ್ತು ಸಾವಿರ ಮಕ್ಕಳ ದೇಹದ ಬೂದಿಯನ್ನು ಗಂಗಾ ಪ್ರವಾಹದಲ್ಲಿ ಕೊಚ್ಚಿಹೋಗುವಂತೆ ಮಾಡಿ ತನ್ನ ಪೂರ್ವಿಕರಿಗೆ ಮುಕ್ತಿ ಕೊಡಿಸುತ್ತಾನೆ ಎಂಬುದನ್ನು ಓದಿದ್ದೆ.

 ಭಗೀರಥನ ಪ್ರಯತ್ನದಿಂದ ಸಗರನ ಅರವತ್ತು ಸಾವಿರ ಮಕ್ಕಳು ಗಂಗೆ ಎಂಬ ಹೆಣ್ಣಿನ ನೀರಿನೊಂದಿಗೆ ಮುಕ್ತಿ
ಯನ್ನು ಪಡೆಯುತ್ತಾರೆ ಎಂದಾದರೆ ದೇವಾಲಯಗಳ ಪ್ರವೇಶದಲ್ಲಿ ತಾಯಿ ಎಂಬ ಹೆಣ್ಣಿಗೆ ನಿರಾಕರಿಸಿದ್ದೇಕೆ?
 
ಜನನಸೂತಕ, ಕುಲಸೂತಕ, ರಜಃಸೂತಕ,
ಎಂಜಲುಸೂತಕ, ಪ್ರೇತಸೂತಕ
ಎಂಬಿವಾದಿಯಾದ ಸರ್ವ ಸೂತಕಂಗಳು
ಅಂಗಲಿಂಗ ಸಂಭಂದಿಗಳಾದ
ಲಿಂಗಭಕ್ತರಿಗಿಲ್ಲ ನೋಡಾ
ಕೂಡಲ ಸಂಗಮ ದೇವಾ.

ಎಂಬ ಬಸವಣ್ಣನವರು ಬರೆದ ವಚನಗಳ ಸಾಲು ಮನದಲ್ಲಿ ನೆನೆದಾಗ ಎಷ್ಟು ಸತ್ಯ ಎನಿಸಿತು. ಶರಣರು ಹನ್ನೆರಡನೇ ಶತಮಾನದಲ್ಲೇ ಈ ಪಂಚಸೂತಕಗಳನ್ನು ಪಂಚಪಾಪಗಳೆಂದು ಕರೆದಿದ್ದಾರೆ. ಆದರೂ ಈ ಪಂಚಪಾಪಗಳು ಇಂದಿಗೂ ಜನಸಮುದಾಯವನ್ನು ಮೂಢ ನಂಬಿಕೆಯಲ್ಲಿ ಹಿಡಿದಿಟ್ಟಿವೆ.

ಹೆರಿಗೆಯಾದವರ ಮನೆಯಲ್ಲಿ ಐದು ದಿನಗಳವರೆಗೆ  ಜನನ-ಸೂತಕ, ಅಸ್ಪೃಶ್ಯರಾಗಿ ಹುಟ್ಟಿದವರನ್ನು ಮುಟ್ಟಿದರೆ ಕುಲಸೂತಕ, ಮುಟ್ಟು ಆದವಳನ್ನು ಮುಟ್ಟಿದರೆ ರಜಃಸೂತಕ, ಒಂದೇ ತಾಟಿನಲ್ಲಿ ಊಟ ಮಾಡಿದರೆ ಎಂಜಲು ಸೂತಕ, ಸತ್ತವರ ಮನೆ ಹೊಕ್ಕರೆ ಪ್ರೇತ ಸೂತಕ ಹೀಗೆ ವೈದಿಕರ ಬಳುವಳಿಗಳಾದ ಪಂಚ ಸೂತಕಗಳನ್ನು ಬಸವಣ್ಣನವರಂತಹ ಅನೇಕ ಶರಣರು ತಿರಸ್ಕರಿಸಿದ್ದಾರೆ ಎಂದು ಓದಿದ್ದು ನೆನಪಾಯ್ತು.

ಒಂದು ಕಡೆ ಇಂತಹ ಮೂಢನಂಬಿಕೆಗಳನ್ನು ವೈದಿಕರು ಜನರಲ್ಲಿ ಬಿತ್ತುವುದು, ಇನ್ನೊಂದುಕಡೆ ಬುದ್ಧ, ಬಸವ, ಅಂಬೇಡ್ಕರ್ ರಂತಹ ಅವೈದಿಕರು ಜನರಲ್ಲಿಯ ಮೂಢನಂಬಿಕೆ ತಡೆಯಲು ಸತತ ಪ್ರಯತ್ನ ನಡೆಸಿದ್ದು-

ಇಂತಹ ಮೂಢನಂಬಿಕೆಗಳ ವಿರುದ್ದದ ಹೋರಾಟಕ್ಕೆ ಭಾರತಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಆದರೂ ಬಹುಪಾಲು ಜನರು ಇನ್ನೂ ಮೂಢ ನಂಬಿಕೆ ಗಳ ಕಡೆಗೆವಾಲುವುದು ರಾಷ್ಟೀಯ ದುರಂತವೇ ಸರಿ.

ಇಂದಿನ ಹೊಸ ಸಹಸ್ರಮಾನದಲ್ಲಿ, ನಾವು ಇಪ್ಪತ್ತೊಂದನೆಯ ಶತಮಾನದಲ್ಲಿದ್ದರೂ ಇಂತಹ ಮೂಢ ನಂಬಿಕೆ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವದರಿಂದಲೇ ಸಮಾಜದಲ್ಲಿ ತಾರತಮ್ಯ ಇನ್ನೂಇದೆ.
 ಮಹಿಳೆಯರು ದೇವಾಲಯಗಳಲ್ಲಿ ಈ ತಾರ ತಮ್ಯ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸುತ್ತಲೇ ಬಂದಿದ್ದಾರೆ.

ಹೆಣ್ಣು-ಗಂಡು ಇಬ್ಬರಲ್ಲೂ ಸುಳಿವ ಆತ್ಮ ಒಂದೇ ಹಾಗಿದ್ದ ಮೇಲೆ ಬೇಧ ಯಾಕೆ?


ಮಹಿಳೆ-ಪುರುಷ ಇಬ್ಬರೂ ಸಮಾನ. ಯಾರಾದರೂ ಒಬ್ಬರು ಮೇಲೆಂದು ಪರಿಗಣಿಸಿದರೆ ಮತ್ತೊಬ್ಬರು ದೌರ್ಜನ್ಯಕ್ಕೆ ಒಳಗಾಗಬೇಕಾಗುತ್ತದೆ ಅಲ್ವಾ? ಸಮಾನತೆಯಲ್ಲಿ ಸೌಹಾರ್ದತೆಯ ಬದುಕಿದೆ. ಇದೇ ಸರಳಸೂತ್ರ.

ಅಷ್ಟಕ್ಕೂ ದೇವಾಲಯಕ್ಕೆ ಹೋಗಿಯೇ ದೇವರನ್ನು ಪೂಜೆ ಮಾಡಬೇಕು ಅಥವಾ ಪೂಜೆ ಮಾಡಿಯೇ ಸದ್ಗತಿ ಕಾಣಬೇಕು ಎಂದು ಎಲ್ಲಿಯೂ ಹೇಳಲಿಲ್ಲ. ಇದನ್ನು ನಾವೆಲ್ಲರೂ ಅರಿಯಬೇಕು. ದೇವಾಲಯ ಪ್ರವೇಶ ನಿರಾಕರಿಸಿದರೆ ಅದು ಧಾರ್ಮಿಕ ಹಕ್ಕು ಚ್ಯುತಿ ಅಲ್ಲ. ಅದರಿಂದ ಮಹಿಳೆಯ ಸ್ಥಾನ-ಮಾನ ಕಡಿಮೆಯಾಗುವುದಿಲ್ಲ.

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಥವಾ ಸದ್ಗತಿಗೆ ದೇವಾಲಯ ಒಂದೇ ಸಾಧನ ಅಲ್ಲ. ಹಾಗಂತ ಯಾವ ಮಹಾಪುರುಷರೂ ಹೇಳಲಿಲ್ಲ. ಯಾವ ಗ್ರಂಥಗಳೂ ಸಾರಲಿಲ್ಲ. ಹಾಗೆ ಸಾರಿದವರು ಅಜ್ಞಾನಿಗಳು ಎಂದೇ ನಮ್ಮ ಪರಂಪರೆ ಹೇಳುತ್ತದೆ.
 
ಕೆಲವು ದೇವಾಲಯ(ಕಾಶಿ)ಗಳಲ್ಲಿ ಇರುವಂತೆ ಮಹಿಳೆ ಪುರುಷರೆಲ್ಲರಿಗೂ ಗರ್ಭ ಗುಡಿಯಲ್ಲಿ ಪ್ರವೇಶ ನೀಡುವ ಪದ್ಧತಿ ಅನುಸರಿಸಬಾರದೇಕೆ? ಇಲ್ಲದಿದ್ದರೆ ಇಬ್ಬರಿಗೂ ನಿರ್ಭಂದಿಸಬೇಕು. ಇದೇ ನ್ಯಾಯ ಸಮ್ಮತವಾದ ನಿರ್ಣಯ ಅಲ್ಲವೇ?
 
                          Indu Naik
 

Wednesday, February 17, 2016

    ಸಂತಸದ ಕ್ಷಣ
 

                   ಕಳೆದ ವಾರ ಬಾಡದ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತು. ನನ್ನನ್ನು ಆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಮಂತ್ರಿಸಿದ್ದರು. ನನ್ನ ವೃತ್ತಿ ಜೀವನದ ಕೊನೆಯ ಹದಿನೇಳು ವರ್ಷ ನಾನು ಆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದೆ. ಈಗ ನಿವೃತ್ತಿ ಹೊಂದಿ ನಾಲ್ಕು ವರ್ಷಗಳು ಮುಗಿದಿದೆ. ಮತ್ತೆ ಕಾಲೇಜಿಗೆ ಹೋಗುವ ಸದವಕಾಶ ನನಗೆ ಈ ಹಿಂದೆ ಸಿಕ್ಕಿದ್ದರೂ ಹೋಗಲಾಗಿರಲಿಲ್ಲ.

ಹಾಗಾಗಿ ಆ ದಿನ ಬಹಳ ಖುಷಿಯಿಂದ ಪಾಲ್ಗೊಂಡಿದ್ದೆ. ಗ್ರಾಮಾಂತರ ಕಾಲೇಜ್ ಆದ್ದರಿಂದ ಹಬ್ಬದ ಸಂಭ್ರಮ ವಿದ್ಯಾರ್ಥಿಗಳಲ್ಲಿ ಕಂಡೆ. ಅವರ ಜೊತೆ ಅನಿಸಿಕೆ  ಹಂಚಿ ಕೊಂಡಾಗ ಸಂಭ್ರಮಿಸಿದೆ.

 ಬಹುಶಃ ನಾನು ಕಲಿಸುವಾಗ ಬಹಳ ಕಟ್ಟುನಿಟ್ಟಿನ ಶಿಸ್ತಿನವಳಾಗಿದ್ದೆ. ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಇದ್ದರೂ ತೋರಗೊಡುತ್ತಿರಲಿಲ್ಲ. ಈಗ ಅಂತಹ ಆತಂಕವೇನೂ ಇರಲಿಲ್ಲ. ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಕಲೆತದ್ದು ಅವಿಸ್ಮರಣೀಯ. 

(ನಾನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು ಇಲ್ಲಿವೆ.)


ನೆಚ್ಚಿನ ವಿದ್ಯಾರ್ಥಿಗಳೇ,


ಪ್ರಸ್ತುತ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನೂ, ನಗದು ರೂಪದಲ್ಲಿ ಬಹುಮಾನಗಳನ್ನೂ ಪಡೆದು ಗೆಲುವನ್ನು ಸಾಧಿಸಿದ್ದಾರೆ. ಸಾಧನೆ ಎಂಬುದು ಯಾರೊಬ್ಬರ ಸೊತ್ತಲ್ಲ ಅದು ಸಾಧಕರ ಸೊತ್ತು.

ನಿಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಗೆ ಚಾಲನೆ ಸಿಕ್ಕಿ ಹೊರ ಪ್ರಕಟವಾಗಬೇಕಾದರೆ ಸ್ಪರ್ಧೆಯಲ್ಲಿ ಭಾಗವಹಿಸಿ. ಅವಕಾಶಗಳಿಂದ ವಂಚಿತರಾಗಬೇಡಿ. 

 ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ವಿಕಸನವುಂಟುಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ ಸಧ್ರ್ಧತೆ, ಮಾನಸಿಕ ಸ್ಥಿರತೆ, ಭೌಧಿಕ ಪ್ರಭುಧ್ಧತೆ,ಸಾಮಾಜಿಕ ಅಂಗೀಕಾರ, ಭಾವನಾತ್ಮಕ ಸಂತುಲತೆ  ಇಂತಹ ಬೆಳವಣಿಗೆ ನಿಮ್ಮಲ್ಲಿ ಉಂಟಾಗಬೇಕಾದರೆ ಕ್ರೀಡೆ, ಸಾಹಿತ್ಯ, ಕಲಾತ್ಮಕ ಚಟುವಟಿಕೆಗಳಲ್ಲಿ ಸ್ವ- ಪ್ರೇರಣೆಯಿಂದ ಭಾಗವಹಿಸಿ.

ಈಗ ಸದ್ಯದ ನಿಮ್ಮ ಜೀವನದ ಗುರಿ ಎಂದರೆ ಮುಂಬರುವ ವಾರ್ಷಿಕ ಪರೀಕ್ಷೆ ಅಥವಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಗರಿಷ್ಠ ಮಟ್ಟದಲ್ಲಿ ಅಂಕಗಳನ್ನು ಗಳಿಸುವುದು.

ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳಲು ಚೆನ್ನಾಗಿ ಗಮನವಿಟ್ಟು ಅಭ್ಯಾಸಮಾಡಿ. ನೀವು ಓದಿದ್ದು ನಿಮ್ಮಮನಸ್ಸಿನಲ್ಲಿ ಗಟ್ಟಿಗೊಳ್ಳ ಬೇಕಾದರೆ ಪುನಹ ಓದಿದನ್ನು ಮನನ ಮಾಡಿಕೊಳ್ಳಿ.ಅಂದಾಗ ಮಾತ್ರ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರಿಸಬಹುದು.

ಹೆಚ್ಚಿನ ಅಂಕಗಳನ್ನು ಪಡೆದು ನೌಕರಿ ಹಿಡಿದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ದೇಶ ಕಟ್ಟುವಲ್ಲಿ ಸಹಕರಿಸಿ ಮಾತೃಭೂಮಿಯ ಋಣಭಾರವನ್ನು ಕಡಿಮೆಗೊಳಿಸಿ. ಪ್ರತಿ ದಿನವು ನಾವು ಎಷ್ಟೊಂದು ಋಣದಲ್ಲಿ ಇರುತ್ತೇವೆ.

ಎನಿತು ಜನ್ಮದಲಿ, ಎನಿತು ಜೀವರಿಗೆ
ಎನಿತು ನಾವು ಋಣಿಯೋ,
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನ ಗಣಿಯೋ

ಹಾಗಾಗಿ ವಿದ್ಯಾರ್ಥಿಗಳೇ, ನೀವು ಜೀವನದಲ್ಲಿ ಮೂರು ವ್ಯಕ್ತಿಗಳನ್ನು ಮರೆಯಬೇಡಿ.

ನಿಮ್ಮ ತಾಯಿ, ತಂದೆ ಮತ್ತು ನಿಮಗೆ ಕಲಿಸಿದ ಗುರುಗಳು.

 ತಾಯಿಯ ಪ್ರೀತಿ ಅಲೌಕಿಕವಾದದ್ದು. ಅಗೆದಷ್ಟು, ಮೊಗೆದಷ್ಟು ಖರ್ಚಾಗದೆ ಇರುವ ಖಜಾನೆಯಂತೆ. ತಂದೆ ನಿಮಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವವ. ಸೂಪರ್ ಹೀರೋ ಇನ್ ದಿ ಫಾಮಿಲಿ. ತಂದೆ-ತಾಯಿ ನಮಗೆ ಜನ್ಮಕೊಟ್ಟರೆ ಶಿಕ್ಷಕರು ಸುಶಿಕ್ಷಿತ ಜೀವನ ಕೊಡ್ತಾರೆ. ಆದ್ದರಿಂದ  ಸದಾ ತಾಯಿಯನ್ನು ಪ್ರೀತಿಸಿ, ತಂದೆಯನ್ನು ಗೌರವಿಸಿ,ಶಿಕ್ಷಕರನ್ನು
ವಂದಿಸಿ. 

ಯುವ ಸಮುದಾಯದಲ್ಲಿ ಧೃಢ ಮನಸ್ಸು, ಪರಿಶ್ರಮ, ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಹೆಚ್ಚು ಸುಶಿಕ್ಷಿತರಾದಂತೆ ಮಾನವೀಯ ಗುಣಗಳನ್ನು ಮರೆಯುತ್ತಾರೆ ಎನ್ನುವ ವಿಚಾರವು ಇದೆ. ಪ್ರೀತಿ,ಅನುಕಂಪ, ಪರೋಪಕಾರ ಮಾನವೀಯತೆ ಇಂತಹ ಗುಣಗಳನ್ನು ಬೆಳೆಸಿಕೊಳ್ಳಿ. ಹೀಗೊಂದು ಚಿಕ್ಕಕಥೆ ಕೇಳಿ.

ಒಬ್ಬತಂದೆ, ಮಗ ದೇವಸ್ತಾನಕ್ಕೆ ಹೋಗ್ತಾರೆ. ಪ್ರವೇಶದ್ವಾರದ ಬಳಿ ಇರುವ ಸಿಂಹದ ವಿಗ್ರಹವನ್ನು ನೋಡಿದ ಮಗ ಹೆದರಿಕೆಯಿಂದ ತಂದೆಗೆ ಹೇಳ್ತಾನೆ ' ಅಪ್ಪಾ, ಓಡು ಓಡು ಇಲ್ದಿದ್ರೆ ಈ ಸಿಂಹ ನಮ್ಮನ್ನು ತಿಂದು ಬಿಡ್ತದೆ' ಅದಕ್ಕೆ ತಂದೆ ಹೇಳ್ತಾನೆ 'ಹೆದರಬೇಡ ಅದು ಸಿಂಹದ ಕಲ್ಲಿನ ವಿಗ್ರಹ ನಮಗೆ ಏನೂ ಮಾಡುವದಿಲ್ಲ '

ಆಗ ಮಗ ಹೇಳ್ತಾನೆ 'ಹಾಗಾದ್ರೆ ದೇವಸ್ತಾನದಲ್ಲಿರುವ ಕಲ್ಲಿನ ದೇವರ ವಿಗ್ರಹ ನಮಗೆ ಹೇಗೆ ಆಶಿರ್ವಾದ ಮಾಡಲು ಸಾಧ್ಯ?'
ಮಗನ ಈ ಪ್ರಶ್ನೆಗೆ ತಂದೆಗೆ ಉತ್ತರಿಸಲಾಗಲಿಲ್ಲ. ಆದಿನದ ದಿನಚರಿಯಲ್ಲಿ ತಂದೆ ಬರೆಯುತ್ತಾನೆ.' ಮಗ ಪ್ರಶ್ನಿಸಿದಾಗ ನಾನು ನಿರುತ್ತರನಾದೆ. ಅಂದಿನಿಂದ ದೇವರನ್ನು ಕಲ್ಲಿನ ವಿಗ್ರಹದಲ್ಲಿ ಹುಡುಕುವುದನ್ನು ಬಿಟ್ಟು ಮನುಷ್ಯರಲ್ಲಿ ಹುಡುಕಲು ಪ್ರಯತ್ನಿಸಿದೆ.... ದೇವರನ್ನು ಕಾಣಲಿಲ್ಲ. ಆದರೆ... ಮಾನವೀಯತೆಯನ್ನು ಕಂಡೆ. ಅಂದ್ರೆ ಏನರ್ಥ ? ಮಾನವೀಯತೆ ದೈವ ಗುಣ. ಮಾನವಿಯತೆಯೇ ದೇವರು.

ಇಂತಹ ಒಳ್ಳೆಯ ಗುಣಗಳನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕು. ಇವು ಸುಲಭ ಸಾಧ್ಯವಲ್ಲ. ಕಷ್ಟಸಾಧ್ಯ. ಕಷ್ಟವಾದರೂ ಸಾಧ್ಯವಾಗುವಂತಹದ್ದು.ನಥಿಂಗ್ ಇಸ್ ಇಂಪಾಸಿಬಲ್. ಎವ್ರಿಥಿಂಗ್ ಇಸ್ ಪಾಸಿಬಲ್. ಹೌದಲ್ಲಾ? ದೆನ್ ಓನ್ಲಿ ಇಟ್ ಬಿಕಮ್ಸ ಪಾರ್ಟ್ ಅಂಡ್ ಪಾರ್ಸೆಲ್ ಆಫ್ ಯುವರ್ ಪರ್ಸನಾಲಿಟಿ.

ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ. ನಕಾರಾತ್ಮಕವಾಗಿ ಅಲ್ಲ. ನಕಾರಾತ್ಮಕ ದೃಷ್ಟಿಕೋನ ಹೇಗಿರ್ತದೆ ಅಂದ್ರೆ, ಒಂದು ಗುಲಾಬಿ ಗಿಡ ನೋಡಿದಾಗ, 'ಓ ಈ ಗುಲಾಬಿ ಪೊದೆ ಬರೆ ಮುಳ್ಳುಗಳಿಂದಲೇ ತುಂಬಿದೆ' ಎಂದು ಬೇಸರಿಸುತ್ತೇವೆ. ಅದೆ ಸಕಾರಾತ್ಮಕ ದೃಷ್ಟಿಕೋನ ನಮ್ಮದಾದರೆ 'ಓ ಈ ಮುಳ್ಳಿನ ಪೊದೆಯಲ್ಲೂ ಎಷ್ಟು ಸುಂದರವಾದ ಹೂವುಗಳಿವೆ ಎಂದು ಖುಶಿ ಪಡ್ತೇವೆ.

ಸಕಾರಾತ್ಮಕತೆ ನಮ್ಮಲ್ಲಿ ಆತ್ಮವಿಶ್ವಾಸವುಂಟು ಮಾಡ್ತದೆ. ಆತ್ಮವಿಶ್ವಾಸದಿಂದ ಕೀಳರಿಮೆ ದೂರವಾಗ್ತದೆ.
ಮರದ ಮೇಲೆ ಕುಳಿತ ಹಕ್ಕಿಗೆ ಮರದ ಕೊಂಬೆ ಮುರಿಯುವುದು ಎಂಬ ಭಯ ಇರುವುದಿಲ್ಲ. ಯಾಕಂದ್ರೆ ಹಕ್ಕಿ ನಂಬಿರುವುದು ಅದರ ರೆಕ್ಕೆಯನ್ನೇ ಹೊರತು ಕೊಂಬೆಯನ್ನಲ್ಲ. ಹಾಗಾಗಿ ಯಾವಾಗಲೂ ಆತ್ಮವಿಶ್ವಾಸಿಗಳಾಗಿ, ನಿಮ್ಮ  ಸಾಮರ್ಥ್ಯ ಹೆಚ್ಚಿಸಿಕೊಳ್ಳಿ. ಆಂಗ್ಲ ಕವಿ ವಿಲಿಯಂ ಷೇಕ್ಸ್ಪಿಯರ್ ಮನುಷ್ಯನ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.

What a piece of work is man
paragon of the world
how noble in reason!
how infinite in faculties!

ಮನಷ್ಯ ಎಂತಹ ಸೃಷ್ಟಿ
ಜೀವಕುಲದಲ್ಲೆ ಅತಿ ಶ್ರೇಷ್ಠ.
ವಿವೇಚನೆಯಲ್ಲಿ ಅದೆಷ್ಟು ಉದಾತ್ತ
ಸಾಮರ್ಥ್ಯದಲ್ಲಿ ಅದೆಷ್ಟುಅಪರಿಮಿತ

ಅಂತಹ ಅಪರಿಮಿತ ಸಾಮರ್ಥ್ಯ ನಿಮ್ಮಲ್ಲಿದೆ ಅದರ ಸದ್ಭಳಕೆ ಮಾಡಿಕೊಳ್ಳಿ.

ದಿನೇ ದಿನೇ ಶ್ರೀಘ್ರವಾಗಿ ಬೆಳೆಯುತ್ತಿರುವ ಇಂದಿನ ತಾಂತ್ರಿಕ ಯುಗದಲ್ಲಿ ನಿಮಗೆ ಸಾವಿರಾರು ಮನರಂಜನೆ ಸಿಗುತ್ತಿದೆ.
ಮೊಬೈಲ, ವಾಟ್ಸ್ಅಪ್ಪ್ ಇವೆಲ್ಲಾ ನಿಮ್ಮ ಜೀವನದಲ್ಲಿ ಇಷ್ಟು ಹಾಸುಹೊಕ್ಕಾಗಿದೆ ಎಂದರೆ ಅವುಗಳನ್ನು ಬಿಟ್ಟು ಜೀವನವೇ ಇಲ್ಲ ಎನ್ನುವಷ್ಟು.
 ನಿಜ ಇವ್ಗಳೆಲ್ಲಾ ಅದ್ಭುತ್ ಅವಿಷ್ಕಾರಗಳು. No doubt about it.   ಆದರೆ  ಒಂದು ಮಿತಿಯಲ್ಲಿ ಅವುಗಳ ಸದ್ಭಳಕೆ ಮಾಡಿಕೊಳ್ಳಿ. ದುರ್ಬಳಕೆ ಮಾಡಬೇಡಿ.
Think good, be good and if possible do good. 

                   Indu Naik