Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Friday, February 19, 2016

ಮಹಿಳೆಯರಿಗೆ ದೇವಸ್ಥಾನದಲ್ಲಿ ನಿಷೇಧ? ಎಷ್ಟು ಸರಿ?

ಮಹಿಳೆಯರು ಅಪವಿತ್ರರೆ?  ( ವಿಚಾರ ಮಂಥನ) 

                               ಅಂದಿನ ಪತ್ರಿಕೆಯಲ್ಲಿ ಮಹಿಳೆಯರ ಬಗ್ಗೆ ಓದಿ ಬೆರಗಾದೆ. ನಾನೂ ಒಬ್ಬ ಪ್ರಜ್ಞಾವಂತ ಮಹಿಳೆಯಾಗಿದ್ದು, ಮಹಿಳೆಯರ ಬಗ್ಗೆ ಇರುವ ತಾರತಮ್ಯ ನನ್ನ ಮನಸ್ಸು ಒಪ್ಪಿಕೊಳ್ಳಲಿಲ್ಲ. ನಾನೊಬ್ಬಳೇ ಏಕೆ ಸಾವಿರ ಸಾವಿರ ಮಹಿಳೆಯರೂ ಈ ಬೇಧವನ್ನು ಒಪ್ಪಿಕೊಳ್ಳಲಾರರು. ಆ ದಿನವಿಡಿ ನನ್ನ ಕೆಲಸದಲ್ಲಿ ನಿರತಳಾಗಿದ್ದರೂ ಮನಸ್ಸು ಈ ವಿಷಯದ ಕುರಿತು ಯೋಚಿಸುತ್ತಿತ್ತು.

 ಮಹಾರಾಷ್ಟ್ರದ ಶನಿ ಶಿಂಗಣಾಪುರದಲ್ಲಿ ಶನಿದೇವರ ಕೃಪೆಗೆ
 ಮಹಿಳೆಯರು ತವಕಪಡುತ್ತಿದ್ದುದು ವಿಶೇಷ. ಶನಿ ದೇವರನ್ನು ಹೆಂಗಸರು ಕಾಣಬಾರದೇಕೆ? ಇದೆಂತಹ ವಿಪರ್ಯಾಸ? 
 
ಶನಿ ದೇವರ ಶಿಲೆಯನ್ನು ಮುಟ್ಟಿ ಪೂಜಿಸುವ ಹಕ್ಕನ್ನು ಚಲಾಯಿಸುವ ಉದ್ದೇಶದಿಂದ ' ಭುಮಾತಾ ಬ್ರಿಗೇಡ್' ಅಧ್ಯಕ್ಷೆ ನೇತ್ರತ್ವದಲ್ಲಿ ಶಿಂಗನಾಪುರಕ್ಕೆ ಈ ಕಾರ್ಯಕರ್ತೆಯರನ್ನು ಬಂಧಿಸಿದರು ನಂತರ ಬಿಡುಗಡೆ ಮಾಡಿ ವಾಪಸ್ ಕಳುಹಿಸಿದರು.

 'ಗಣರಾಜ್ಯೋತ್ಸವ ದಿನ ಮಹಿಳೆಯರಿಗೆ ಕರಾಳ ದಿನ ಎಂದು ಘೋಷಿಸುತ್ತ ಮಹಿಳೆಯರು ರಸ್ತೆ ಮೇಲೆ ಮಲಗಿ ಪ್ರತಿಭಟಿಸಿದರು ಎಂಬುದನ್ನು ಪತ್ರಿಕೆಯಲ್ಲಿ ಓದಿದಾಗ ಮನಸ್ಸಿಗೆ ಸಹಿಸಲಾರದಷ್ಟು  ವೇದನೆ ಆಯ್ತು.
 

'ಶನಿ ಶಿಂಗಣಾಪುರದ ಶಿಲಾರೂಪಿ ಶನಿದೇವರು. ಈ ಶಿಲೆಯನ್ನು ಮುಟ್ಟುವ ಹಕ್ಕು ಮಹಿಳೆಯರಿಗಿಲ್ಲ ಮಹಿಳೆ ಮುಟ್ಟು ಆಗುವದರಿಂದ. ಅವಳು ಮುಟ್ಟು ಆಗದ  ಸಂದರ್ಭದಲ್ಲೂ ಅಪವಿತ್ರಳೆ? ಮುಟ್ಟುಅಪವಿತ್ರವೇ? ಹಾಗಾದರೆ ಅದೇ ಮುಟ್ಟು ನಿಂತು ಹುಟ್ಟಿದವರೆಲ್ಲರೂ ಅಪವಿತ್ರರಲ್ಲವೇ?' ಎನ್ನುವ ಮಹಿಳೆಯರ ಅಳಲು ಪತ್ರಿಕೆಯಲ್ಲಿ ಓದಿದಾಗ ಮನಸ್ಸಿಗೆ ತುಂಬಾ ಹಿಂಸೆಯಾಯಿತು. 
 
ಇಂದು ಮಹಿಳೆ ಕಾಲಿಡದ ಕ್ಷೇತ್ರವೇ ಇಲ್ಲ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಪುರುಷರೊಂದಿಗೆ ಭುಜಕ್ಕೆ ಭುಜಕೊಟ್ಟು, ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು ಪ್ರಗತಿ ಪಥದತ್ತ ಹೆಜ್ಜೆ ಹಾಕುತ್ತಿದ್ದಾಳೆ. ಅಂದು ಕೇವಲ ಅಡುಗೆ ಮನೆಗೆ ಸೀಮಿತವಾದ ಹೆಣ್ಣು ಇಂದು ಅಂತರಿಕ್ಷದ ಮಟ್ಟದವರೆಗೂ ಸೈ ಎನಿಸಿಕೊಂದಿದ್ದಾಳೆ.
 
'ನಾನು ಹೆಣ್ಣು, ನಾನು ಭಾರತೀಯ ಸೈನ್ಯವನ್ನು ಸೇರುತ್ತೇನೆ, ನಾನು ನನ್ನ ದೇಶವನ್ನು ರಕ್ಷಿಸುತ್ತೇನೆ' ಎನ್ನುವ ದ್ರಢ ಸಂಕಲ್ಪದ ಹೆಣ್ಣು ಮಕ್ಕಳಿರುವಾಗ ತಾರತಮ್ಯ ಏಕೆ? ಹಿಂದೂ ಮಹಿಳೆಯರಿಗೆ ದೇವಸ್ಥಾನಗಳಲ್ಲಿ ಪ್ರವೇಶ ನಿಷೇಧ ಏಕೆ? ಹಾಗಿದ್ದರೆ ಮಹಿಳೆಯರು ಅಪವಿತ್ರರೆ? ಅದು ಹೇಗೆ ಸಾಧ್ಯ?

ನಮ್ಮ ದೇಶದಲ್ಲಿ ಅನೇಕ ನದಿಗಳು ಹೆಣ್ಣುಗಳ ಹೆಸರನ್ನೇ ಹೇಳುತ್ತಿವೆ. ಗಂಗಾ,ತುಂಗಾ,ಕೃಷ್ಣೆ. ಕಾವೇರಿ,ನರ್ಮದಾ.ಗೋದಾವರಿ,ಶರಾವತಿ,ನೇತ್ರಾವತಿ ಹೀಗೆ ಅನೇಕ ನದಿಗಳು ಹೆಣ್ಣಿನ ಹೆಸರನ್ನೇ ಹೇಳುತ್ತಿದೆ.
 
 ಅದರಲ್ಲಿ ಒಂದು ಕಥೆ ಪ್ರಕಾರ ಭಗೀರಥನು ತನ್ನ ಪೂರ್ವಿಕರ ಮುಕ್ತಿಗಾಗಿ ತನ್ನ ರಾಜ್ಯವನ್ನು ಬಿಟ್ಟು ಹಿಮಾಲಯ ಸೇರಿ ತಪಸ್ಸು ಮಾಡಿ ಭಗೀರಥ ಪ್ರಯತ್ನದಿಂದ ಗಂಗೆಯನ್ನು ಭೂಮಿಗಿಳಿಸಿ ಸಗರನ ಅರವತ್ತು ಸಾವಿರ ಮಕ್ಕಳ ದೇಹದ ಬೂದಿಯನ್ನು ಗಂಗಾ ಪ್ರವಾಹದಲ್ಲಿ ಕೊಚ್ಚಿಹೋಗುವಂತೆ ಮಾಡಿ ತನ್ನ ಪೂರ್ವಿಕರಿಗೆ ಮುಕ್ತಿ ಕೊಡಿಸುತ್ತಾನೆ ಎಂಬುದನ್ನು ಓದಿದ್ದೆ.

 ಭಗೀರಥನ ಪ್ರಯತ್ನದಿಂದ ಸಗರನ ಅರವತ್ತು ಸಾವಿರ ಮಕ್ಕಳು ಗಂಗೆ ಎಂಬ ಹೆಣ್ಣಿನ ನೀರಿನೊಂದಿಗೆ ಮುಕ್ತಿ
ಯನ್ನು ಪಡೆಯುತ್ತಾರೆ ಎಂದಾದರೆ ದೇವಾಲಯಗಳ ಪ್ರವೇಶದಲ್ಲಿ ತಾಯಿ ಎಂಬ ಹೆಣ್ಣಿಗೆ ನಿರಾಕರಿಸಿದ್ದೇಕೆ?
 
ಜನನಸೂತಕ, ಕುಲಸೂತಕ, ರಜಃಸೂತಕ,
ಎಂಜಲುಸೂತಕ, ಪ್ರೇತಸೂತಕ
ಎಂಬಿವಾದಿಯಾದ ಸರ್ವ ಸೂತಕಂಗಳು
ಅಂಗಲಿಂಗ ಸಂಭಂದಿಗಳಾದ
ಲಿಂಗಭಕ್ತರಿಗಿಲ್ಲ ನೋಡಾ
ಕೂಡಲ ಸಂಗಮ ದೇವಾ.

ಎಂಬ ಬಸವಣ್ಣನವರು ಬರೆದ ವಚನಗಳ ಸಾಲು ಮನದಲ್ಲಿ ನೆನೆದಾಗ ಎಷ್ಟು ಸತ್ಯ ಎನಿಸಿತು. ಶರಣರು ಹನ್ನೆರಡನೇ ಶತಮಾನದಲ್ಲೇ ಈ ಪಂಚಸೂತಕಗಳನ್ನು ಪಂಚಪಾಪಗಳೆಂದು ಕರೆದಿದ್ದಾರೆ. ಆದರೂ ಈ ಪಂಚಪಾಪಗಳು ಇಂದಿಗೂ ಜನಸಮುದಾಯವನ್ನು ಮೂಢ ನಂಬಿಕೆಯಲ್ಲಿ ಹಿಡಿದಿಟ್ಟಿವೆ.

ಹೆರಿಗೆಯಾದವರ ಮನೆಯಲ್ಲಿ ಐದು ದಿನಗಳವರೆಗೆ  ಜನನ-ಸೂತಕ, ಅಸ್ಪೃಶ್ಯರಾಗಿ ಹುಟ್ಟಿದವರನ್ನು ಮುಟ್ಟಿದರೆ ಕುಲಸೂತಕ, ಮುಟ್ಟು ಆದವಳನ್ನು ಮುಟ್ಟಿದರೆ ರಜಃಸೂತಕ, ಒಂದೇ ತಾಟಿನಲ್ಲಿ ಊಟ ಮಾಡಿದರೆ ಎಂಜಲು ಸೂತಕ, ಸತ್ತವರ ಮನೆ ಹೊಕ್ಕರೆ ಪ್ರೇತ ಸೂತಕ ಹೀಗೆ ವೈದಿಕರ ಬಳುವಳಿಗಳಾದ ಪಂಚ ಸೂತಕಗಳನ್ನು ಬಸವಣ್ಣನವರಂತಹ ಅನೇಕ ಶರಣರು ತಿರಸ್ಕರಿಸಿದ್ದಾರೆ ಎಂದು ಓದಿದ್ದು ನೆನಪಾಯ್ತು.

ಒಂದು ಕಡೆ ಇಂತಹ ಮೂಢನಂಬಿಕೆಗಳನ್ನು ವೈದಿಕರು ಜನರಲ್ಲಿ ಬಿತ್ತುವುದು, ಇನ್ನೊಂದುಕಡೆ ಬುದ್ಧ, ಬಸವ, ಅಂಬೇಡ್ಕರ್ ರಂತಹ ಅವೈದಿಕರು ಜನರಲ್ಲಿಯ ಮೂಢನಂಬಿಕೆ ತಡೆಯಲು ಸತತ ಪ್ರಯತ್ನ ನಡೆಸಿದ್ದು-

ಇಂತಹ ಮೂಢನಂಬಿಕೆಗಳ ವಿರುದ್ದದ ಹೋರಾಟಕ್ಕೆ ಭಾರತಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಆದರೂ ಬಹುಪಾಲು ಜನರು ಇನ್ನೂ ಮೂಢ ನಂಬಿಕೆ ಗಳ ಕಡೆಗೆವಾಲುವುದು ರಾಷ್ಟೀಯ ದುರಂತವೇ ಸರಿ.

ಇಂದಿನ ಹೊಸ ಸಹಸ್ರಮಾನದಲ್ಲಿ, ನಾವು ಇಪ್ಪತ್ತೊಂದನೆಯ ಶತಮಾನದಲ್ಲಿದ್ದರೂ ಇಂತಹ ಮೂಢ ನಂಬಿಕೆ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವದರಿಂದಲೇ ಸಮಾಜದಲ್ಲಿ ತಾರತಮ್ಯ ಇನ್ನೂಇದೆ.
 ಮಹಿಳೆಯರು ದೇವಾಲಯಗಳಲ್ಲಿ ಈ ತಾರ ತಮ್ಯ ಒಂದಿಲ್ಲೊಂದು ರೀತಿಯಲ್ಲಿ ಅನುಭವಿಸುತ್ತಲೇ ಬಂದಿದ್ದಾರೆ.

ಹೆಣ್ಣು-ಗಂಡು ಇಬ್ಬರಲ್ಲೂ ಸುಳಿವ ಆತ್ಮ ಒಂದೇ ಹಾಗಿದ್ದ ಮೇಲೆ ಬೇಧ ಯಾಕೆ?


ಮಹಿಳೆ-ಪುರುಷ ಇಬ್ಬರೂ ಸಮಾನ. ಯಾರಾದರೂ ಒಬ್ಬರು ಮೇಲೆಂದು ಪರಿಗಣಿಸಿದರೆ ಮತ್ತೊಬ್ಬರು ದೌರ್ಜನ್ಯಕ್ಕೆ ಒಳಗಾಗಬೇಕಾಗುತ್ತದೆ ಅಲ್ವಾ? ಸಮಾನತೆಯಲ್ಲಿ ಸೌಹಾರ್ದತೆಯ ಬದುಕಿದೆ. ಇದೇ ಸರಳಸೂತ್ರ.

ಅಷ್ಟಕ್ಕೂ ದೇವಾಲಯಕ್ಕೆ ಹೋಗಿಯೇ ದೇವರನ್ನು ಪೂಜೆ ಮಾಡಬೇಕು ಅಥವಾ ಪೂಜೆ ಮಾಡಿಯೇ ಸದ್ಗತಿ ಕಾಣಬೇಕು ಎಂದು ಎಲ್ಲಿಯೂ ಹೇಳಲಿಲ್ಲ. ಇದನ್ನು ನಾವೆಲ್ಲರೂ ಅರಿಯಬೇಕು. ದೇವಾಲಯ ಪ್ರವೇಶ ನಿರಾಕರಿಸಿದರೆ ಅದು ಧಾರ್ಮಿಕ ಹಕ್ಕು ಚ್ಯುತಿ ಅಲ್ಲ. ಅದರಿಂದ ಮಹಿಳೆಯ ಸ್ಥಾನ-ಮಾನ ಕಡಿಮೆಯಾಗುವುದಿಲ್ಲ.

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅಥವಾ ಸದ್ಗತಿಗೆ ದೇವಾಲಯ ಒಂದೇ ಸಾಧನ ಅಲ್ಲ. ಹಾಗಂತ ಯಾವ ಮಹಾಪುರುಷರೂ ಹೇಳಲಿಲ್ಲ. ಯಾವ ಗ್ರಂಥಗಳೂ ಸಾರಲಿಲ್ಲ. ಹಾಗೆ ಸಾರಿದವರು ಅಜ್ಞಾನಿಗಳು ಎಂದೇ ನಮ್ಮ ಪರಂಪರೆ ಹೇಳುತ್ತದೆ.
 
ಕೆಲವು ದೇವಾಲಯ(ಕಾಶಿ)ಗಳಲ್ಲಿ ಇರುವಂತೆ ಮಹಿಳೆ ಪುರುಷರೆಲ್ಲರಿಗೂ ಗರ್ಭ ಗುಡಿಯಲ್ಲಿ ಪ್ರವೇಶ ನೀಡುವ ಪದ್ಧತಿ ಅನುಸರಿಸಬಾರದೇಕೆ? ಇಲ್ಲದಿದ್ದರೆ ಇಬ್ಬರಿಗೂ ನಿರ್ಭಂದಿಸಬೇಕು. ಇದೇ ನ್ಯಾಯ ಸಮ್ಮತವಾದ ನಿರ್ಣಯ ಅಲ್ಲವೇ?
 
                          Indu Naik
 

1 comment :

  1. You are right. Howdu nyaya sammath nirvana. Chennagide nimma vichar. ska

    ReplyDelete