Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Wednesday, February 17, 2016

    ಸಂತಸದ ಕ್ಷಣ
 

                   ಕಳೆದ ವಾರ ಬಾಡದ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಇತ್ತು. ನನ್ನನ್ನು ಆ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಮಂತ್ರಿಸಿದ್ದರು. ನನ್ನ ವೃತ್ತಿ ಜೀವನದ ಕೊನೆಯ ಹದಿನೇಳು ವರ್ಷ ನಾನು ಆ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದೆ. ಈಗ ನಿವೃತ್ತಿ ಹೊಂದಿ ನಾಲ್ಕು ವರ್ಷಗಳು ಮುಗಿದಿದೆ. ಮತ್ತೆ ಕಾಲೇಜಿಗೆ ಹೋಗುವ ಸದವಕಾಶ ನನಗೆ ಈ ಹಿಂದೆ ಸಿಕ್ಕಿದ್ದರೂ ಹೋಗಲಾಗಿರಲಿಲ್ಲ.

ಹಾಗಾಗಿ ಆ ದಿನ ಬಹಳ ಖುಷಿಯಿಂದ ಪಾಲ್ಗೊಂಡಿದ್ದೆ. ಗ್ರಾಮಾಂತರ ಕಾಲೇಜ್ ಆದ್ದರಿಂದ ಹಬ್ಬದ ಸಂಭ್ರಮ ವಿದ್ಯಾರ್ಥಿಗಳಲ್ಲಿ ಕಂಡೆ. ಅವರ ಜೊತೆ ಅನಿಸಿಕೆ  ಹಂಚಿ ಕೊಂಡಾಗ ಸಂಭ್ರಮಿಸಿದೆ.

 ಬಹುಶಃ ನಾನು ಕಲಿಸುವಾಗ ಬಹಳ ಕಟ್ಟುನಿಟ್ಟಿನ ಶಿಸ್ತಿನವಳಾಗಿದ್ದೆ. ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ ಇದ್ದರೂ ತೋರಗೊಡುತ್ತಿರಲಿಲ್ಲ. ಈಗ ಅಂತಹ ಆತಂಕವೇನೂ ಇರಲಿಲ್ಲ. ಮುಕ್ತ ಮನಸ್ಸಿನಿಂದ ಎಲ್ಲರೊಡನೆ ಕಲೆತದ್ದು ಅವಿಸ್ಮರಣೀಯ. 

(ನಾನು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು ಇಲ್ಲಿವೆ.)


ನೆಚ್ಚಿನ ವಿದ್ಯಾರ್ಥಿಗಳೇ,


ಪ್ರಸ್ತುತ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನೂ, ನಗದು ರೂಪದಲ್ಲಿ ಬಹುಮಾನಗಳನ್ನೂ ಪಡೆದು ಗೆಲುವನ್ನು ಸಾಧಿಸಿದ್ದಾರೆ. ಸಾಧನೆ ಎಂಬುದು ಯಾರೊಬ್ಬರ ಸೊತ್ತಲ್ಲ ಅದು ಸಾಧಕರ ಸೊತ್ತು.

ನಿಮ್ಮಲ್ಲಿ ಸುಪ್ತವಾಗಿದ್ದ ಪ್ರತಿಭೆಗೆ ಚಾಲನೆ ಸಿಕ್ಕಿ ಹೊರ ಪ್ರಕಟವಾಗಬೇಕಾದರೆ ಸ್ಪರ್ಧೆಯಲ್ಲಿ ಭಾಗವಹಿಸಿ. ಅವಕಾಶಗಳಿಂದ ವಂಚಿತರಾಗಬೇಡಿ. 

 ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ವಿಕಸನವುಂಟುಮಾಡುವುದೇ ಶಿಕ್ಷಣದ ಗುರಿ. ಶಾರೀರಿಕ ಸಧ್ರ್ಧತೆ, ಮಾನಸಿಕ ಸ್ಥಿರತೆ, ಭೌಧಿಕ ಪ್ರಭುಧ್ಧತೆ,ಸಾಮಾಜಿಕ ಅಂಗೀಕಾರ, ಭಾವನಾತ್ಮಕ ಸಂತುಲತೆ  ಇಂತಹ ಬೆಳವಣಿಗೆ ನಿಮ್ಮಲ್ಲಿ ಉಂಟಾಗಬೇಕಾದರೆ ಕ್ರೀಡೆ, ಸಾಹಿತ್ಯ, ಕಲಾತ್ಮಕ ಚಟುವಟಿಕೆಗಳಲ್ಲಿ ಸ್ವ- ಪ್ರೇರಣೆಯಿಂದ ಭಾಗವಹಿಸಿ.

ಈಗ ಸದ್ಯದ ನಿಮ್ಮ ಜೀವನದ ಗುರಿ ಎಂದರೆ ಮುಂಬರುವ ವಾರ್ಷಿಕ ಪರೀಕ್ಷೆ ಅಥವಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಗರಿಷ್ಠ ಮಟ್ಟದಲ್ಲಿ ಅಂಕಗಳನ್ನು ಗಳಿಸುವುದು.

ಅದಕ್ಕೆ ಬೇಕಾದ ಸಿದ್ದತೆ ಮಾಡಿಕೊಳ್ಳಲು ಚೆನ್ನಾಗಿ ಗಮನವಿಟ್ಟು ಅಭ್ಯಾಸಮಾಡಿ. ನೀವು ಓದಿದ್ದು ನಿಮ್ಮಮನಸ್ಸಿನಲ್ಲಿ ಗಟ್ಟಿಗೊಳ್ಳ ಬೇಕಾದರೆ ಪುನಹ ಓದಿದನ್ನು ಮನನ ಮಾಡಿಕೊಳ್ಳಿ.ಅಂದಾಗ ಮಾತ್ರ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರಿಸಬಹುದು.

ಹೆಚ್ಚಿನ ಅಂಕಗಳನ್ನು ಪಡೆದು ನೌಕರಿ ಹಿಡಿದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ದೇಶ ಕಟ್ಟುವಲ್ಲಿ ಸಹಕರಿಸಿ ಮಾತೃಭೂಮಿಯ ಋಣಭಾರವನ್ನು ಕಡಿಮೆಗೊಳಿಸಿ. ಪ್ರತಿ ದಿನವು ನಾವು ಎಷ್ಟೊಂದು ಋಣದಲ್ಲಿ ಇರುತ್ತೇವೆ.

ಎನಿತು ಜನ್ಮದಲಿ, ಎನಿತು ಜೀವರಿಗೆ
ಎನಿತು ನಾವು ಋಣಿಯೋ,
ತಿಳಿದು ನೋಡಿದರೆ ಬಾಳು ಎಂಬುದಿದು
ಋಣದ ರತ್ನ ಗಣಿಯೋ

ಹಾಗಾಗಿ ವಿದ್ಯಾರ್ಥಿಗಳೇ, ನೀವು ಜೀವನದಲ್ಲಿ ಮೂರು ವ್ಯಕ್ತಿಗಳನ್ನು ಮರೆಯಬೇಡಿ.

ನಿಮ್ಮ ತಾಯಿ, ತಂದೆ ಮತ್ತು ನಿಮಗೆ ಕಲಿಸಿದ ಗುರುಗಳು.

 ತಾಯಿಯ ಪ್ರೀತಿ ಅಲೌಕಿಕವಾದದ್ದು. ಅಗೆದಷ್ಟು, ಮೊಗೆದಷ್ಟು ಖರ್ಚಾಗದೆ ಇರುವ ಖಜಾನೆಯಂತೆ. ತಂದೆ ನಿಮಗೆ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವವ. ಸೂಪರ್ ಹೀರೋ ಇನ್ ದಿ ಫಾಮಿಲಿ. ತಂದೆ-ತಾಯಿ ನಮಗೆ ಜನ್ಮಕೊಟ್ಟರೆ ಶಿಕ್ಷಕರು ಸುಶಿಕ್ಷಿತ ಜೀವನ ಕೊಡ್ತಾರೆ. ಆದ್ದರಿಂದ  ಸದಾ ತಾಯಿಯನ್ನು ಪ್ರೀತಿಸಿ, ತಂದೆಯನ್ನು ಗೌರವಿಸಿ,ಶಿಕ್ಷಕರನ್ನು
ವಂದಿಸಿ. 

ಯುವ ಸಮುದಾಯದಲ್ಲಿ ಧೃಢ ಮನಸ್ಸು, ಪರಿಶ್ರಮ, ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಹೆಚ್ಚು ಸುಶಿಕ್ಷಿತರಾದಂತೆ ಮಾನವೀಯ ಗುಣಗಳನ್ನು ಮರೆಯುತ್ತಾರೆ ಎನ್ನುವ ವಿಚಾರವು ಇದೆ. ಪ್ರೀತಿ,ಅನುಕಂಪ, ಪರೋಪಕಾರ ಮಾನವೀಯತೆ ಇಂತಹ ಗುಣಗಳನ್ನು ಬೆಳೆಸಿಕೊಳ್ಳಿ. ಹೀಗೊಂದು ಚಿಕ್ಕಕಥೆ ಕೇಳಿ.

ಒಬ್ಬತಂದೆ, ಮಗ ದೇವಸ್ತಾನಕ್ಕೆ ಹೋಗ್ತಾರೆ. ಪ್ರವೇಶದ್ವಾರದ ಬಳಿ ಇರುವ ಸಿಂಹದ ವಿಗ್ರಹವನ್ನು ನೋಡಿದ ಮಗ ಹೆದರಿಕೆಯಿಂದ ತಂದೆಗೆ ಹೇಳ್ತಾನೆ ' ಅಪ್ಪಾ, ಓಡು ಓಡು ಇಲ್ದಿದ್ರೆ ಈ ಸಿಂಹ ನಮ್ಮನ್ನು ತಿಂದು ಬಿಡ್ತದೆ' ಅದಕ್ಕೆ ತಂದೆ ಹೇಳ್ತಾನೆ 'ಹೆದರಬೇಡ ಅದು ಸಿಂಹದ ಕಲ್ಲಿನ ವಿಗ್ರಹ ನಮಗೆ ಏನೂ ಮಾಡುವದಿಲ್ಲ '

ಆಗ ಮಗ ಹೇಳ್ತಾನೆ 'ಹಾಗಾದ್ರೆ ದೇವಸ್ತಾನದಲ್ಲಿರುವ ಕಲ್ಲಿನ ದೇವರ ವಿಗ್ರಹ ನಮಗೆ ಹೇಗೆ ಆಶಿರ್ವಾದ ಮಾಡಲು ಸಾಧ್ಯ?'
ಮಗನ ಈ ಪ್ರಶ್ನೆಗೆ ತಂದೆಗೆ ಉತ್ತರಿಸಲಾಗಲಿಲ್ಲ. ಆದಿನದ ದಿನಚರಿಯಲ್ಲಿ ತಂದೆ ಬರೆಯುತ್ತಾನೆ.' ಮಗ ಪ್ರಶ್ನಿಸಿದಾಗ ನಾನು ನಿರುತ್ತರನಾದೆ. ಅಂದಿನಿಂದ ದೇವರನ್ನು ಕಲ್ಲಿನ ವಿಗ್ರಹದಲ್ಲಿ ಹುಡುಕುವುದನ್ನು ಬಿಟ್ಟು ಮನುಷ್ಯರಲ್ಲಿ ಹುಡುಕಲು ಪ್ರಯತ್ನಿಸಿದೆ.... ದೇವರನ್ನು ಕಾಣಲಿಲ್ಲ. ಆದರೆ... ಮಾನವೀಯತೆಯನ್ನು ಕಂಡೆ. ಅಂದ್ರೆ ಏನರ್ಥ ? ಮಾನವೀಯತೆ ದೈವ ಗುಣ. ಮಾನವಿಯತೆಯೇ ದೇವರು.

ಇಂತಹ ಒಳ್ಳೆಯ ಗುಣಗಳನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕು. ಇವು ಸುಲಭ ಸಾಧ್ಯವಲ್ಲ. ಕಷ್ಟಸಾಧ್ಯ. ಕಷ್ಟವಾದರೂ ಸಾಧ್ಯವಾಗುವಂತಹದ್ದು.ನಥಿಂಗ್ ಇಸ್ ಇಂಪಾಸಿಬಲ್. ಎವ್ರಿಥಿಂಗ್ ಇಸ್ ಪಾಸಿಬಲ್. ಹೌದಲ್ಲಾ? ದೆನ್ ಓನ್ಲಿ ಇಟ್ ಬಿಕಮ್ಸ ಪಾರ್ಟ್ ಅಂಡ್ ಪಾರ್ಸೆಲ್ ಆಫ್ ಯುವರ್ ಪರ್ಸನಾಲಿಟಿ.

ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ. ನಕಾರಾತ್ಮಕವಾಗಿ ಅಲ್ಲ. ನಕಾರಾತ್ಮಕ ದೃಷ್ಟಿಕೋನ ಹೇಗಿರ್ತದೆ ಅಂದ್ರೆ, ಒಂದು ಗುಲಾಬಿ ಗಿಡ ನೋಡಿದಾಗ, 'ಓ ಈ ಗುಲಾಬಿ ಪೊದೆ ಬರೆ ಮುಳ್ಳುಗಳಿಂದಲೇ ತುಂಬಿದೆ' ಎಂದು ಬೇಸರಿಸುತ್ತೇವೆ. ಅದೆ ಸಕಾರಾತ್ಮಕ ದೃಷ್ಟಿಕೋನ ನಮ್ಮದಾದರೆ 'ಓ ಈ ಮುಳ್ಳಿನ ಪೊದೆಯಲ್ಲೂ ಎಷ್ಟು ಸುಂದರವಾದ ಹೂವುಗಳಿವೆ ಎಂದು ಖುಶಿ ಪಡ್ತೇವೆ.

ಸಕಾರಾತ್ಮಕತೆ ನಮ್ಮಲ್ಲಿ ಆತ್ಮವಿಶ್ವಾಸವುಂಟು ಮಾಡ್ತದೆ. ಆತ್ಮವಿಶ್ವಾಸದಿಂದ ಕೀಳರಿಮೆ ದೂರವಾಗ್ತದೆ.
ಮರದ ಮೇಲೆ ಕುಳಿತ ಹಕ್ಕಿಗೆ ಮರದ ಕೊಂಬೆ ಮುರಿಯುವುದು ಎಂಬ ಭಯ ಇರುವುದಿಲ್ಲ. ಯಾಕಂದ್ರೆ ಹಕ್ಕಿ ನಂಬಿರುವುದು ಅದರ ರೆಕ್ಕೆಯನ್ನೇ ಹೊರತು ಕೊಂಬೆಯನ್ನಲ್ಲ. ಹಾಗಾಗಿ ಯಾವಾಗಲೂ ಆತ್ಮವಿಶ್ವಾಸಿಗಳಾಗಿ, ನಿಮ್ಮ  ಸಾಮರ್ಥ್ಯ ಹೆಚ್ಚಿಸಿಕೊಳ್ಳಿ. ಆಂಗ್ಲ ಕವಿ ವಿಲಿಯಂ ಷೇಕ್ಸ್ಪಿಯರ್ ಮನುಷ್ಯನ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಹೇಳಿದ್ದಾರೆ.

What a piece of work is man
paragon of the world
how noble in reason!
how infinite in faculties!

ಮನಷ್ಯ ಎಂತಹ ಸೃಷ್ಟಿ
ಜೀವಕುಲದಲ್ಲೆ ಅತಿ ಶ್ರೇಷ್ಠ.
ವಿವೇಚನೆಯಲ್ಲಿ ಅದೆಷ್ಟು ಉದಾತ್ತ
ಸಾಮರ್ಥ್ಯದಲ್ಲಿ ಅದೆಷ್ಟುಅಪರಿಮಿತ

ಅಂತಹ ಅಪರಿಮಿತ ಸಾಮರ್ಥ್ಯ ನಿಮ್ಮಲ್ಲಿದೆ ಅದರ ಸದ್ಭಳಕೆ ಮಾಡಿಕೊಳ್ಳಿ.

ದಿನೇ ದಿನೇ ಶ್ರೀಘ್ರವಾಗಿ ಬೆಳೆಯುತ್ತಿರುವ ಇಂದಿನ ತಾಂತ್ರಿಕ ಯುಗದಲ್ಲಿ ನಿಮಗೆ ಸಾವಿರಾರು ಮನರಂಜನೆ ಸಿಗುತ್ತಿದೆ.
ಮೊಬೈಲ, ವಾಟ್ಸ್ಅಪ್ಪ್ ಇವೆಲ್ಲಾ ನಿಮ್ಮ ಜೀವನದಲ್ಲಿ ಇಷ್ಟು ಹಾಸುಹೊಕ್ಕಾಗಿದೆ ಎಂದರೆ ಅವುಗಳನ್ನು ಬಿಟ್ಟು ಜೀವನವೇ ಇಲ್ಲ ಎನ್ನುವಷ್ಟು.
 ನಿಜ ಇವ್ಗಳೆಲ್ಲಾ ಅದ್ಭುತ್ ಅವಿಷ್ಕಾರಗಳು. No doubt about it.   ಆದರೆ  ಒಂದು ಮಿತಿಯಲ್ಲಿ ಅವುಗಳ ಸದ್ಭಳಕೆ ಮಾಡಿಕೊಳ್ಳಿ. ದುರ್ಬಳಕೆ ಮಾಡಬೇಡಿ.
Think good, be good and if possible do good. 

                   Indu Naik





 
 
 
 
 
 
 
 
 

No comments :

Post a Comment