Machine Translate:

Till I translate the Kannada Posts, please find the broken machine translation done by Google Translator. [ It is very bad though! :( ]

Wednesday, June 25, 2014

ಹೀಗೊಂದು ಪ್ರೇಮ ಕಥೆ-ಸಂಚಿಕೆ-2

ಹೀಗೊಂದು ಪ್ರೇಮ ಕಥೆ
ಸಂಚಿಕೆ-2
 
ಜ್ಯೋತಿಕಾಳ ಬಗ್ಗೆ ನನ್ನ ನೆನಪು ಸುಮಾರು ಮೂವತ್ತು ವರ್ಷಕ್ಕೂ ಹಿಂದೆ ಸರಿದಿತ್ತು. ನನಗೆ ಬಹು ದೂರದ ಊರಿನಲ್ಲಿ ಹೊಸದಾಗಿ ಒಂದು ನೌಕರಿ ಸಿಕ್ಕಿತ್ತು. ನಾನು ಮತ್ತು ನನ್ನ ಗೆಳತಿ ಸಿಂಧು ಇಬ್ಬರೂ ಸೇರಿ ಒಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವು.
 
 ನಮ್ಮ ಮನೆಯ ಸ್ವಲ್ಪ ದೂರದಲ್ಲಿ ಸುಮಾರು ಹತ್ತು-ಹದಿನೈದು ಮನೆಗಳಾಚೆ ಜ್ಯೋತಿಕಾಳ ಮನೆಯಿತ್ತು. ಅವಳದು ಚಿಕ್ಕದಾದ ಮನೆ. ಮನೆ ಎನ್ನುವದಕ್ಕಿಂತಲೂ ಗುಡಿಸಲು ಎನ್ನುವದೇ ಹೆಚ್ಚು ಸೂಕ್ತ.
 
ತಂದೆ ಸೂರಪ್ಪ. ಸೌಮ್ಯ ಸ್ವಭಾವದವನು.ತಾಯಿ ಸುಭದ್ರಾ.ಬಲು ಘಾಟಿ ಹೆಂಗಸು. ಬಾಯಿಬಿಟ್ಟರೆ ಸಾಕು, ಅವಳ ಮಾತನ್ನು ಸುಮಾರಾಗಿ ಯಾರಿಂದಲೂ ನಿಯಂತ್ರಿಸಲು ಸಾಧ್ಯ ವಾಗುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಅವಳಿಂದ ಆದಷ್ಟು ದೂರವೇ ಇರುತ್ತಿದ್ದರು.
 
 ಇವರಿಗೆ ಮೂರು ಮಕ್ಕಳು- ರವಿಂದ್ರ, ಜ್ಯೋತಿಕಾ ಮತ್ತು ಶ್ವೇತಾ ಅವರದು ಕಡು ಬಡತನ. ತಂದೆ ಸಂಸಾರದೂಗಿಸಲು ಚಿಕ್ಕ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಮನೆಯ ಎದುರಿನ ಚಿಕ್ಕ ಕೈ-ತೋಟದಲ್ಲಿ ಹೂವು, ತರಕಾರಿ ಬೆಳೆಯುತ್ತಿದ್ದರು.
ಅದೃಷ್ಟವಶಾತ್ ಮಕ್ಕಳು ಕಲಿಯುವದರಲ್ಲಿ ಒಬ್ಬರಿಗಿಂತ ಒಬ್ಬರು ಚುರುಕು. ಪ್ರತಿ ದಿನ ಜ್ಯೋತಿಕಾ ಮತ್ತು ಶ್ವೇತಾಇಬ್ಬರೂ ಸೇರಿ ಅಲ್ಲಿಯೇ ಸನಿಹದಲ್ಲಿರುವ ಸುತ್ತು-ಮುತ್ತಲಿನ ಮನೆಗಳಿಗೆ ಹೋಗಿ ಹೂವು ಮತ್ತು ತರಕಾರಿ ಮಾರಾಟ ಮಾಡಿ ಶಾಲೆಗೆ ಹೋಗುತ್ತಿದ್ದರು.
 
 ನಾವೂ ಅವರಿಂದ ಪ್ರತಿದಿನ ಹೂವು ಮತ್ತು ತರಕಾರಿಗಳನ್ನು ಕೊಂಡು ಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ನಮಗೆ ಅವಶ್ಯವಿಲ್ಲದಿದ್ದರೂ ಅವುಗಳನ್ನು ಕೊಂಡು ಕೊಳ್ಳುತ್ತಿದ್ದೆವು. ಯಾಕೆಂದ್ರೆ ಆ ಪುಟ್ಟ ಮಕ್ಕಳನ್ನು ಕಂಡರೆ ನಮಗೆ ಪಂಚ-ಪ್ರಾಣ. ಆ ವಟಾರದಲ್ಲಿ ಎಲ್ಲರಿಗೂ ಅವರು ಇಷ್ಟವಗುತ್ತಿದ್ದರು.ಆರೇಳು ವರ್ಷದ ನಂತರ ನನಗೆ ಬೇರೆ ಊರಿಗೆ ವರ್ಗವಾಯಿತು. ಆದರೆ ನನ್ನ ಗೆಳತಿ ಸಿಂಧು ಅಲ್ಲಿಯೇ ಇದ್ದಳು.
 
ನಾನು ಸಿಂಧುಳಿಗೆ ಭೆಟ್ಟಿಯಾಗಲು ಹೋದಾಗಲೆಲ್ಲ ಜ್ಯೋತಿಕಾ ಮತ್ತು ಶ್ವೇತಾರನ್ನು ತಪ್ಪದೇ ಭೇಟಿಯಾಗಿ ಬರುತ್ತಿದ್ದೆ.ಹಾಯ್ ಸ್ಕೂಲ್ ಮುಗಿಸಿ ಕಾಲೇಜಗೆ ಹೋಗುವಾಗ್ಲೂ  ಮನೆ-ಮನೆಗೆ ಹೋಗಿ ಹೂವು,ತರಕಾರಿ ಮಾರಾಟ ಮಾಡುವುದನ್ನು  ಈ ಮಕ್ಕಳು ತಪ್ಪಿಸುತ್ತಿರಲಿಲ್ಲ. ದೊಡ್ಡವರಾದ್ದರಿಂದ ಒಂದು ಸೈಕಲ್ ನ್ನು ಖರೀದಿಸಿದ್ದರು. ಸೈಕಲ್ ಮೇಲೆ ಬಹು ದೂರದ ಮನೆಗಳಿಗೆ ಹೋಗಿ  ಮಾರಾಟ ಮಾಡಿ ಬಂದು ಅವರು ಕಾಲೇಜಿಗೆ ಹೋಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.ಅವರ ಶ್ರಮ ಗೌರವ ನನಗೆ ತುಂಬಾ ಹಿಡಿಸಿತ್ತು.
 
ನಾನು ಅವರಿಗೆ ಕಲಿಸಿರಲಿಲ್ಲ. ನಾನು ಕೆಲಸ ಮಾಡುವ ಕಾಲೇಜು ಬಹು ದೂರದಲ್ಲಿತ್ತು. ಸುಮಾರು ಇಪ್ಪತ್ತೈದು ವರ್ಷದ ವರೆಗೂ ಆ ವಟಾರದಲ್ಲಿಯೇ ಇದ್ದರು. ತದ ನಂತರ ಎಕ್ಷಟೆನ್ಶನ್ ಏರಿಯಾದಲ್ಲಿ ಒಂದು ಪುಟ್ಟ ಮನೆ ಕಟ್ಟಿಕೊಂಡು ಅಲ್ಲಿ ವಾಸವಾಗಿದ್ದರಂತೆ.
 
ವರ್ಷವೇ ಉರುಳಿತು. ಒಮ್ಮೆ ಸಿಂಧೂಳ ಮನೆಯಲ್ಲಿದ್ದಾಗ ಶ್ವೇತಾ ಸ್ಕೂಟಿ ಹೊಡೆದುಕೊಂಡು  ಬಂದಿದ್ದಳು.  “ಜ್ಯೋತಿಕಾ ಎಂ. ಎಸ್.ಸಿ. ಮುಗಿಸಿ ಬೆಂಗಳೂರಿನಲ್ಲಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾಳೆ. ನಾನು ಬಿ. ಎ.  ಮುಗಿಸಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರವಿಂದ್ರ ನಿಗೆ ಮೆರಿಟ್- ಸೀಟ್  ಸಿಕ್ಕಿದ್ದರಿಂದ ಬಿ. ಇ. ಮುಗಿಸಿ ಇಂಜಿನಿಯರ್ ಆಗಿದ್ದಾನೆ ಎಂದು ಶ್ವೇತಾ  ಹೇಳಿದಾಗ ನನಗೆ ಖುಷಿಯಾಗಿತ್ತು.
 
ಅದಾದ ನಂತರ ಅವರ ಸುಳಿವಿರಲಿಲ್ಲ. ಮತ್ತೆ ಶ್ವೇತಾ ನಮ್ಮ ಮನೆಗೆ ಬಂದದ್ದು ಎರಡು ವರ್ಷದ ನಂತರ. ತನ್ನ ಮದುವೆಯ ಆಮಂತ್ರಣ-ಪತ್ರಿಕೆ ನನಗೆ ಕೊಟ್ಟು ನನ್ನನ್ನು ಮದುವೆಗೆ ಕರೆಯಲು ಬಂದಾಗ ನನ್ನ ಮನಸ್ಸಿಗೆ ಕಸಿವಿಸಿ ಎನಿಸಿತ್ತು
.“ಅಕ್ಕನ ಮದುವೆಯಾಗದೇ ನೀನು ತಂಗಿ ಮದುವೆ ಆಗ್ತಿದ್ದೀಯಾ?” ಎಂದು ಕೇಳಿದೆ. ಅದಕ್ಕೆ ಅವಳು, “ ಅಕ್ಕನಿಗೆ ಮದುವೆಯಾಗಲು ಇಷ್ಟವಿಲ್ಲವಂತೆ. ಅದಕ್ಕೆ ತಂದೆ-ತಾಯಿ ನನ್ನ ಮದುವೆಗೆ ಪ್ರಯತ್ನಿಸಿದ್ದಾರೆ.ನಾನು  ಮದುವೆಗೆ ಒಪ್ಪಿದ್ದೇನೆ.” ಎಂದಿದ್ದಳು
 
ಶ್ವೇತಾಳ ಮದುವೆಗೆ ಹೋದಾಗ ಅಕ್ಕ ಜ್ಯೋತಿಕಾ ಎಲ್ಲಿಯೂ ಕಂಡು ಬರಲಿಲ್ಲ. ಅವಳ ಬಗ್ಗೆ ಯಾರನ್ನೂ ಕೇಳಲಾಗದೇ ತೆಪ್ಪಗಾದೆ. ಮನೆಗೆ ಬಂದಾಗಲೂ  ನಾನು ಜ್ಯೋತಿಕಾಳ ಬಗ್ಗೆ ಯೋಚಿಸುತ್ತಿದ್ದೆ.  ಅವಳಿಗಾಗಿ ಮನಸ್ಸು ಮಮ್ಮಲ ಮರುಗಿತು.       
 
 
ಮುಂದುವರೆಯುವುದು....
                                                                            Indu Naik

1 comment :